ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ |
ವಸುದೇವ ಸುತನ ಕಾಂಬುದಕೆ || ಪ ||
ಘಸಣಿಯಾಗುವೆ ಭವ ವಿಷಯ ವಾರುಧಿಯೊಳು |
ಶಶಿಮುಖಿಯೆ ಕರುಣದಿ ಕಾಯೆ || ಅ.ಪ ||
ಪರರ ಅನ್ನವನುಂಡು ಪರರ ಧನವ ಕೊಂಡು |
ಪರಿ ಪರಿಯ ಕ್ಲೇಶಗಳನುಂಡು |
ವರಲಕ್ಷ್ಮೀ ನಿನ್ನ ಚಾರು ಚರಣಗಳ ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ || ೧ ||
ಮಂದಹಾಸಿನಿ ಭವಸಿಂಧುವಿನೊಳಗಿಟ್ಟು |
ಚಂದವೇ ಎನ್ನ ನೋಡುವುದು |
ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನ | ಮಂದರಧರನ ತೋರಮ್ಮ || ೨ ||
ಅಂದಚಂದಗಳೊಲ್ಲೆ ಬಂಧುಬಳಗ ಒಲ್ಲೆ |
ಬಂಧನಕೆಲ್ಲ ಕಾರಣವು |
ಇಂದಿರೇಶನ ಪಾದದ್ವಂದ್ವವ ತೋರಿ ಹೃ | ನ್ಮಂದಿರದೊಳು ಬಂದು ಬೇಗ || ೩ ||